ಚೆನ್ನೈ, ಜು.19: ಮಗನ ಕಾಲೇಜು ಶುಲ್ಕ ಕಟ್ಟಲು ಹಣ ಹೊಂದಿಸಲಾಗದೇ ಚಲಿಸುತ್ತಿದ್ದ ಬಸ್ ನಡಿಗೆ ಬಿದ್ದು ತಾಯಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ.
ತಾನು ಸತ್ತರೆ ಸಿಗುವ ಪರಿಹಾರದಿಂದ ತನ್ನ ಮಕ್ಕಳ ಕಾಲೇಜು ಶುಲ್ಕವನ್ನು ಪಾವತಿಸಬಹುದು ಎಂಬ ಉದ್ದೇಶದಿಂದ ಆಕೆ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ. ಸೇಲಂ ಕಲೆಕ್ಟರೇಟ್ನಲ್ಲಿ ತಾತ್ಕಾಲಿಕ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ 39 ವರ್ಷದ ಪಾಪ್ಪತಿ ಬಸ್ಸಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮೂಲಗಳ ಪ್ರಕಾರ ಅಪಘಾತದಲ್ಲಿ ಮೃತಪಟ್ಟರೆ ನಿಮ್ಮ ಕುಟುಂಬಕ್ಕೆ 45,000 ರೂ.ಲಭಿಸುವುದಾಗಿ ಹೇಳಿ ಯಾರೋ ದಾರಿ ತಪ್ಪಿಸಿದ್ದರಿಂದ ಮಹಿಳೆ ಈ ರೀತಿ ಮಾಡಿದ್ದಾರೆ. ಇದೇ ಕಾರಣಕ್ಕೆ ಮಗನ ಕಾಲೇಜು ಶುಲ್ಕ ಪಾವತಿಸಲು ಹಣದ ಅಗತ್ಯವಿದ್ದ ಮಹಿಳೆ ತನ್ನ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಆದರೆ ಪಾಪ್ಪತಿ ಅವರ ಮಗ ಈ ವರದಿಗಳನ್ನು ನಿರಾಕರಿಸಿದ್ದು, ಅದು “ನಕಲಿ ಸುದ್ದಿ” ಎಂದಿದ್ದಾರೆ. ನಮ್ಮ ಸಂಬಂಧಿಕರು ಶುಲ್ಕ ಪಾವತಿಗೆ ನಮಗೆ ಸಹಾಯ ಮಾಡುತ್ತಿದ್ದಾರೆ. ನಾಳೆ, ಸತ್ಯಗಳು ಹೊರಬರುತ್ತವೆ”ಎಂದು ಆತ ಹೇಳಿರುವುದಾಗಿ ಎನ್ಡಿಟಿವಿ ವರದಿ ಹೇಳಿದೆ.
ಪಾಪ್ಪತಿಯ ಮಗಳು ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಕೋರ್ಸ್ನ ಅಂತಿಮ ವರ್ಷದಲ್ಲಿ ಓದುತ್ತಿದ್ದು ಮಗ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆರ್ಕಿಟೆಕ್ಚರ್ ಓದುತ್ತಿದ್ದಾನೆ.
ಈ ಘಟನೆಯ 48 ಸೆಕೆಂಡ್ಗಳ ಸಿಸಿಟಿವಿ ವಿಡಿಯೊದಲ್ಲಿ ಮಹಿಳೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಾಣಿಸುತ್ತದೆ. ನಂತರ ವೇಗವಾಗಿ ಬರುತ್ತಿದ್ದ ಬಸ್ನ ಕಡೆಗೆ ಇದ್ದಕ್ಕಿದ್ದಂತೆ ರಸ್ತೆ ದಾಟುತ್ತಿದ್ದು, ಬಸ್ಸು ಆಕೆಗೆ ಡಿಕ್ಕಿ ಹೊಡೆದು ಆಕೆ ರಸ್ತೆಯಲ್ಲಿ ಬೀಳುತ್ತಿರುವುದು ಕಾಣಿಸುತ್ತದೆ.
Comments