top of page
  • Writer's pictureDoubleClickMedia

ರಾಹುಲ್ ಗಾಂಧಿ ಸಂಸದೀಯ ಸದಸ್ಯತ್ವ ಅನರ್ಹತೆ ವಾಪಾಸ್ ಪಡೆದ ಲೋಕಸಭೆ ಸ್ಪೀಕರ್


RahulGandhi

ನವದೆಹಲಿ ಆಗಸ್ಟ್‌ 7 : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಸಂಸತ್‌ ಸ್ಥಾನದ ಅನರ್ಹತೆಯನ್ನ ಲೋಕಸಭೆಯ ಸ್ಪೀಕರ್‌ ಓಂ ಪ್ರಕಾಶ್‌ ಬಿರ್ಲಾ ವಾಪಸ್‌ ಪಡೆದಿದ್ದಾರೆ. ಈ ಮೂಲಕ ರಾಹುಲ್‌ ಗಾಂಧಿ ಅವರ ಸಂಸದೀಯ ಸದಸ್ಯತ್ವವನ್ನು ಮರುಸ್ಥಾಪಿಸಲಾಗಿದೆ. ಶುಕ್ರವಾರ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಸ್ಪೀಕರ್‌ ಈ ನಿರ್ಧಾರ ಕೈಗೊಂಡಿದ್ದಾರೆ.



ಮಾನನಷ್ಟ ಪ್ರಕರಣದಲ್ಲಿ ಸೂರತ್ ಜಿಲ್ಲಾ ನ್ಯಾಯಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಬಳಿಕ ಜನಪ್ರತಿನಿಧಿ ಕಾಯ್ದೆಯಡಿ ಕಳೆದ ಮಾರ್ಚ್ ನಲ್ಲಿ ರಾಹುಲ್ ಗಾಂಧಿ ಅವರ ಲೋಕಸಭೆ ಸದಸ್ಯತ್ವ ಅನರ್ಹಗೊಳಿಸಲಾಗಿತ್ತು.


ಮೋದಿ ಉಪನಾಮ ಪ್ರಕರಣದಲ್ಲಿ ಸೂರತ್ ನ್ಯಾಯಾಲಯದಿಂದ ದೋಷಿ ಎಂದು ಸಾಬೀತಾದ ನಂತರ ವಯನಾಡ್ ಕ್ಷೇತ್ರದ ಲೋಕಸಭಾ ಸದಸ್ಯ ರಾಹುಲ್ ಗಾಂಧಿಯವರ ಸದಸ್ಯತ್ವವನ್ನು ಸ್ಪೀಕರ್ ರದ್ದುಗೊಳಿಸಿ ಆದೇಶ ಹೊರಡಿಸಿದ್ದರು. ನ್ಯಾಯಾಲಯದ ನೀಡಿದ ತೀರ್ಪನ್ನು ರಾಹುಲ್ ಗಾಂಧಿ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಆದರೆ, ಸೂರತ್ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದು ದೋಷಿ ಎಂದು ತೀರ್ಪು ಪ್ರಕಟಿಸಿತ್ತು. ಇದರ ನಂತರ ರಾಹುಲ್ ಗಾಂಧಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸುವ ಮೂಲಕ ಹೈಕೋರ್ಟ್‌ನ ತೀರ್ಪನ್ನು ಮರು ಪ್ರಶ್ನಿಸಿದರು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಶಿಕ್ಷೆಯ ನಿರ್ಧಾರಕ್ಕೆ ತಡೆ ನೀಡಿ ಆದೇಶಿಸಿದೆ. ಇದೀಗ ಲೋಕಸಭಾ ಸ್ಪೀಕರ್ ಅವರು ರಾಹುಲ್ ಗಾಂಧಿಯ ಸಂಸದ ಸ್ಥಾನದ ಅನರ್ಹತೆಯನ್ನು ವಾಪಸ್ ಪಡೆದಿದ್ದಾರೆ.



ರಾಹುಲ್ ಅವರು 2019ರ ಏಪ್ರಿಲ್ 13 ರಂದು ಕೋಲಾರದಲ್ಲಿ ನಡೆದ ಲೋಕಸಭಾ ಚುಣಾವಣಾ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ್ದರು. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ಎಲ್ಲಾ ಕಳ್ಳರಿಗೆ ಮೋದಿ ಎಂಬ ಉಪನಾಮ ಏಕಿದೆ ಎಂದು ಪ್ರಶ್ನಿಸಿದ್ದರು. ಈ ಬಗ್ಗೆ ಗುಜರಾತ್ ಶಾಸಕ ಪೂರ್ಣೇಶ್ ಮೋದಿ ಅವರು, ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.




Comments


bottom of page