top of page
  • Writer's pictureDoubleClickMedia

ಧರ್ಮ ಸಾಮರಸ್ಯ ಮೆರೆದ ಸ್ವೀಕರ್ ಖಾದರ್: ನಾಗಾರಾಧನೆಗೆ ಜಮೀನು ದಾನ


U T Khader

ಮಂಗಳೂರು, ಆಗಸ್ಟ್‌ 22: ದಕ್ಷಿಣ ಕನ್ನಡದಲ್ಲಿ ಕೋಮು ಗಲಭೆ ಸಾಮಾನ್ಯ. ಇಲ್ಲಿ ಆಗಾಗ ಕೋಮು ಭಾವನೆ ಕೆರಳಿಸುವ ಘಟನೆಗಳು, ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಇದರ ಹೊರತಾಗಿಯೂ ಹಿಂದೂ-ಮುಸ್ಲಿಂರು ಸೌಹಾರ್ದಯುತವಾಗಿ ಬಾಳ್ವೆ ಮಾಡುತ್ತಿದ್ದಾರೆ. ಇದಕ್ಕೆ ನಿದರ್ಶನವೆಂಬಂತೆ ಕರ್ನಾಟಕ ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್‌ ಅವರು ನಾಗಾರಾಧನೆಗೆ ಸ್ವಂತ ಭೂಮಿ ಬಿಟ್ಟುಕೊಟ್ಟು ಕೋಮು ಸೌಹಾರ್ದತೆ ಮೆರೆದಿದ್ದಾರೆ.



ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಪುಣಚ ಪರಿಯಾಲ್ತಡ್ಕದಲ್ಲಿ ಯು.ಟಿ.ಖಾದರ್ ಅವರಿಗೆ ಸೇರಿದ ಪಿತ್ರಾರ್ಜಿತ ಜಮೀನು ಇದೆ. ಹಲವು ತಲೆಮಾರುಗಳಿಂದ ಅಲ್ಲಿ ನಾಗಾರಾಧನೆ ನಡೆಯುತ್ತಿತ್ತು ಎಂದು ಹೇಳಲಾಗಿದೆ. ನಂತರದ ದಿನಗಳಲ್ಲಿ ಈ ಜಮೀನು ಯು.ಟಿ ಖಾದರ್ ಅಜ್ಜ ಮಹಮ್ಮದ್ ಹಾಜಿ ಅವರ ಒಡೆತನಕ್ಕೆ ಸೇರಿದೆ. ಅದರಲ್ಲಿ ಅಡಿಕೆ, ತೆಂದಿನ ತೋಟ ಮಾಡಿದ್ದಾರೆ. ಆ ಜಮೀನಿನ ಒಂದು ಭಾಗದಲ್ಲಿ ಇಂದಿಗೂ ನಾಗಾರಾಧನೆ ನಡೆಸಲಾಗುತ್ತದೆ.



ಆ ಕಾಲದಲ್ಲಿ ಆ ಜಾಗ ಹಿಂದುಗಳಾದ ದಳವಾಯಿ ಕುಟುಂಬಕ್ಕೆ ಸೇರಿತ್ತು. ಭೂಮಸೂದೆ ಕಾನೂನಿನಲ್ಲಿ ಖಾದರ್ ಕುಟುಂಬದ ಹಿರಿಯರಿಗೆ ಆ ಜಮೀನು ಸಿಕ್ಕಿತು. ಪಾಲು ಮಾಡುವಾಗ ಅದು ಖಾದರ್ ಅವರ ಪಾಲಿಗೆ ಬಂದಿತ್ತು. ದಳವಾಯಿ ಕುಟುಂಬದ ನಾಗನ ಕಟ್ಟೆ ಅದೇ ಜಮೀನಿನಲ್ಲಿತ್ತು. ದಳವಾಯಿ ಕುಟುಂಬದ ನಾಗಸಾನಿಧ್ಯ ಮುಸ್ಲಿಂ ಧರ್ಮದವರ

ಸ್ಥಳದಲ್ಲಿರುವುದರಿಂದ ಅವರು ಬೇರೆ ಕಡೆ ಆರಾಧನೆ ಮಾಡುತ್ತಿದ್ದರು. ಮೂಲಸ್ಥಾನದ ನಾಗಕಟ್ಟೆಯಲ್ಲಿ ಪೂಜೆಯಾಗದೇ ಇರುವುದರಿಂದ ದಳವಾಯಿ ಕುಟುಂಬಕ್ಕೆ ಸಮಸ್ಯೆಗಳು ಕಾಡಲು ಶುರು ಮಾಡಿದವು. ಆಗ ಅಷ್ಟಮಂಗಳ ಪ್ರಶ್ನೆ ಇಟ್ಟಾಗ ಮೂಲಜಾಗದಲ್ಲಿ ಪೂಜೆ ನಡೆಯಬೇಕೆಂದು ಉತ್ತರ ಸಿಕ್ಕಿತ್ತು. ಆಗ ಬೇರೆ ದಾರಿ ಕಾಣದೇ ದಳವಾಯಿ ಕುಟುಂಬ ನಾಗನಕಟ್ಟೆಯ ಆ ಜಾಗದ 10 ಸೆಂಟ್ಸ್ ಸ್ಥಳ ಖರೀದಿಗೆ ಯು.ಟಿ.ಖಾದರ್ ಅವರಿಗೆ ಬೇಡಿಕೆ ಇಟ್ಟಿತು. ವಿಷಯ ತಿಳಿದ ಖಾದರ್ ಆ ಪರಿಸರದ 10ಕ್ಕೆ 10 ಸೆಂಟ್ಸ್ ಸೇರಿಸಿ ಒಟ್ಟು 20 ಸೆಂಟ್ಸ್ ಸ್ಥಳವನ್ನು ದಳವಾಯಿ ಕುಟುಂಬಕ್ಕೆ ಉಚಿತವಾಗಿ ಬಿಟ್ಟುಕೊಟ್ಟು ಮಾನವೀಯತೆ ಮೆರೆದರು.


Commentaires


bottom of page