top of page
  • Writer's pictureDoubleClickMedia

ನಂತೂರು ಜಂಕ್ಷನ್‍ನಿಂದ ಕೆ.ಪಿ.ಟಿ ಜಂಕ್ಷನ್‍ವೆರೆಗೆ ಮರ ಕಡಿತ: ಆಕ್ಷೇಪಣೆಗಳಿಗೆ ಆಹ್ವಾನ


nanthoor to kpt

ಮಂಗಳೂರು,ಜೂ.6: ಮಂಗಳೂರುಮಹಾನಗರ ಪಾಲಿಕೆ ವ್ಯಾಪ್ತಿಯ ರಾಷ್ಟ್ರಿಯ ಹೆದ್ದಾರಿ-66ರಲ್ಲಿ ನಂತೂರು ಜಂಕ್ಷನ್‍ನಿಂದ ಕೆ.ಪಿ.ಟಿ ಜಂಕ್ಷನ್‍ವೆರೆಗೆ 1.6 ಕಿ.ಮೀ ವ್ಯಾಪ್ತಿಯಲ್ಲಿ ಸರ್ವೀಸ್ ರಸ್ತೆ ಮಾಡುವ ಉದ್ದೇಶದಿಂದ ಮರ ಕಡಿಯಬೇಕಾಗಿದ್ದು ಸಾರ್ವಜನಿಕರಿಂದ ಆಕ್ಷೇಪಣೆಗಳಿದ್ದಲ್ಲಿ ಆಕ್ಷೇಪಣೆಯನ್ನು ಸಲ್ಲಿಸಬಹುದು ಎಂದು ವೃಕ್ಷಾಧಿಕಾರಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ರಾಷ್ಟ್ರೀಯ ಹೆದ್ದಾರಿಯ ವಾಹನಗಳು, ಮಂಗಳೂರು ನಗರ ಪ್ರದೇಶಕ್ಕೆ ಬರುವ ವಾಹನಗಳು ಮತ್ತು ಮಂಗಳೂರು ನಗರದಿಂದ ವಿಮಾನ ನಿಲ್ದಾಣ ಮತ್ತು ಇತರೆ ಜಿಲ್ಲಾ ಕೇಂದ್ರಗಳಿಗೆ ಹೋಗುವ ವಾಹನಗಳು ಹಾಗೂ ಮಂಗಳೂರು ನಗರದ ಪೋರ್ಟ್‍ಗೆ ಬಂದು ಹೋಗುವ ವಾಹನಗಳಿಂದ ಆಗುತ್ತಿರುವ ವಾಹನ ದಟ್ಟಣೆಯನ್ನು ನಿಯಂತ್ರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ವೆಹಿಕ್ಯುಲರ್ ಓವರ್‍ಪಾಸ್ ಅನ್ನು ನಿರ್ಮಿಸಿ ಪ್ರಸ್ತಾಪಿತ ರಸ್ತೆಯ ಎರಡೂ ಬದಿಗಳಲ್ಲಿ ಸರ್ವೀಸ್ ರಸ್ತೆಯನ್ನು (ಪಾದಚಾರಿ ರಸ್ತೆ) ಮಾಡಲು ಯೋಜನೆ ರೂಪಿಸಲಾಗಿದೆ.


ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಅರಣ್ಯ ಇಲಾಖೆಯಿಂದ ಕೆಲವು ವರ್ಷಗಳಿಂದ ನೆಟ್ಟು ಬೆಳೆಸಿದ 602 ಮರಗಳನ್ನು ತೆರವುಗೊಳಿಸಲು ರಾಷ್ಟ್ರೀಯ ಹೆದ್ದಾರಿಯ ಅಂಗ ಸಂಸ್ಥೆಯಾದ ನ್ಯೂ ಮಂಗಳೂರು ಪೋರ್ಟ್ ರೋಡ್ ಕಂಪೆನಿ ಲಿಮಿಟೆಡ್ ರವರು ಗುರುತಿಸಿರುತ್ತಾರೆ. ಈ 602 ಮರಗಳ ಪೈಕಿ ಸ್ಥಳಾಂತರಿಸಲು ಯೋಗ್ಯವಾದ ಸುಮಾರು 370 ಸಸಿ ಮರಗಳನ್ನು ಸ್ಥಳಾಂತರಿಸಬಹುದಾಗಿದ್ದು, ಈ ಬಗ್ಗೆ ಸಂಬಂಧಪಟ್ಟ ಸಂಸ್ಥೆಯವರಿಗೆ ಮಾಹಿತಿ ನೀಡಿ ಕೇಂದ್ರ ಸರ್ಕಾರದ ಸುತ್ತೋಲೆಯಂತೆ ಅವರ ವತಿಯಿಂದಲೇ ಸ್ಥಳಾಂತರಿಸಲಾಗುವುದು.



ಇನ್ನುಳಿದ 232 ಮರಗಳನ್ನು ಪ್ರಸ್ತಾಪಿತ ವೆಹಿಕ್ಯುಲರ್ ಓವರ್‍ಪಾಸ್ ಕಾಮಗಾರಿಯ ಸಂಬಂಧ ಕಡಿಯಲೇಬೇಕಾದ ಅನಿವಾರ್ಯತೆ ಕಂಡುಬರುವುದರಿಂದ ಹಾಗೂ ಈ ಮರಗಳನ್ನು ಸ್ಥಳಾಂತರಿಸಲು ಸಾಧ್ಯವಾಗದೇ ಇರುವ ಕಾರಣ ಕಡಿಯುವ ಅನಿವಾರ್ಯತೆ ಇದೆ. ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆಯ ಕಲಂ (1) (3) (ಗಿII) 50 ಕ್ಕಿಂತ ಹೆಚ್ಚು ಮರಗಳನ್ನು ಕಡಿಯಬೇಕಾದಲ್ಲಿ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿರುವುದರಿಂದ ಇದೇ ಜುಲೈ 10ರ ಸಂಜೆ 4 ಗಂಟೆಗೆ ಮಂಗಳೂರು ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು ಸಭೆ ಕರೆಯಲಾಗಿದೆ.



ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆಗಳಿದ್ದಲ್ಲಿ ಖುದ್ದಾಗಿ ಸಭೆಗೆ ಹಾಜರಾಗಿ ಆಕ್ಷೇಪಣೆಯನ್ನು ಸಲ್ಲಿಸಬಹುದು ಅಥವಾ ಆ ದಿನಾಂಕದ ಒಳಗಾಗಿ ವೃಕ್ಷಾಧಿಕಾರಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು ಉಪ ವಿಭಾಗ ಇವರಿಗೆ ಲಿಖಿತ ರೂಪದಲ್ಲಿ ಆಕ್ಷೇಪಣೆ ಸಲ್ಲಿಸಬಹುದು. ಅಥವಾ ಇ-ಮೇಲ್ ವಿಳಾಸ: dcf_mngt@yahoo.co.in ಮೂಲಕ ಅಥವಾ ನಗರದ ಪಿ.ಡಬ್ಲ್ಯೂಡಿ ಕಟ್ಟಡದಲ್ಲಿರುವ ಮಂಗಳೂರು ಉಪವಿಭಾಗದ ವೃಕ್ಷಾಧಿಕಾರಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿಗೆ ನಿಗಧಿತ ಸಮಯ ಹಾಗೂ ದಿನಾಂಕದೊಳಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ ಎಂದು ವೃಕ್ಷಾಧಿಕಾರಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Comments


bottom of page